ಯೆರೆಮಿಯನ ಆರನೇ ವಿಖ್ಯಾಪನೆ - ಯೆರೆಮಿಯ 20:7–18

ಮುನ್ನುಡಿ
ಯೆರೆಮಿಯ 20:7–18 "ಯೆರೆಮಿಯನ ವಿಖ್ಯಾಪನೆಗಳು" (Confessions
of Jeremiah) ಎಂದು ಕರೆಯಲಾಗುವ ಭಾಗದ ಕೊನೆಯ ವಿಖ್ಯಾಪನೆ. ತನ್ನ ಈ ಆರನೇ ವಿಖ್ಯಾಪನೆಯಲ್ಲಿ, ಯೆರೆಮಿಯ ವಿರೋಧ, ತಿರಸ್ಕಾರ ಮತ್ತು ಮಾನಸಿಕ ಹಿಂಸೆಯ ತನ್ನ ಅಂತರಂಗದ ತುಮುಲಗಳನ್ನು ಬಹಿರಂಗಪಡಿಸುತ್ತಾನೆ. ಆರನೇ ವಿಖ್ಯಾಪನೆ ಅದರ ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿದೆ.
ತಿರಸ್ಕಾರ ಮತ್ತು ಕಿರುಕುಳದ ಭಾವನಾತ್ಮಕ ನೋವು
ಸಂದರ್ಭ
ವಿಖ್ಯಾಪನೆಯನ್ನು ಪರಿಶೀಲಿಸುವ ಮೊದಲು, ನಾವು ಅದರ ತಕ್ಷಣದ ಸಂದರ್ಭವನ್ನು ಅರ್ಥಮಾಡಿಕೊಳ್ಳೋಣ. “ಸರ್ವೇಶ್ವರನ ಆಲಯದ ಮುಖ್ಯ ಅಧಿಕಾರಿಯಾಗಿದ್ದ ಇಮ್ಮೇರನ ಮಗನಾದ ಯಾಜಕ ಪಷ್ಹೂರ ಯೆರೆಮಿಯ ಪ್ರವಾದಿಸುವುದನ್ನು ಕೇಳಿದನು. ಆಗ ಪಷ್ಹೂರ ಯೆರೆಮಿಯನನ್ನು ಹೊಡೆದು ಸರ್ವೇಶ್ವರನ ಆಲಯದ ಮೇಲಿನ ಬೆನ್ಯಾಮಿನ್ ದ್ವಾರದಲ್ಲಿದ್ದ ಸೆರೆಯಲ್ಲಿ ಹಾಕಿದನು. ಮರುದಿನ ಬೆಳಿಗ್ಗೆ ಪಷ್ಹೂರ ಯೆರೆಮಿಯನನ್ನು ಸೆರೆಯಿಂದ ಬಿಡಿಸಿದಾಗ, ಯೆರೆಮಿಯ ಅವನಿಗೆ, “ಸರ್ವೇಶ್ವರ ನಿನಗೆ ಪಷ್ಹೂರ ಎಂದು ಹೆಸರಿಟ್ಟಿಲ್ಲ, ಬದಲಾಗಿ ‘ಸುತ್ತಲೂ ಭಯಂಕರʼ (ಹೀಬ್ರೂ: ಮಾಗೋರ್-ಮಿಸ್ಸಾಬಿಬ್) ಎಂದು ಹೆಸರಿಟ್ಟಿದ್ದಾನೆ ಎಂದು ಹೇಳಿದನು (ಯೆರೆಮಿಯ 20:1–3). ಈ ಸಾರ್ವಜನಿಕ ಅವಮಾನ ಯೆರೆಮಿಯ ವರ್ಷಗಳಿಂದ ಸಹಿಸಿಕೊಂಡಿದ್ದ ನಿರಂತರ ತಿರಸ್ಕಾರ ಮತ್ತು ಬೆದರಿಕೆಗಳ ಪರಾಕಾಷ್ಠೆಯಾಗಿತ್ತು.
ಪ್ರವಾದಿ ಬಲಿಪಶುವಾದಂತಹ ಅನುಭವ
ಈ ವಿಖ್ಯಾಪನೆ ದೇವರನ್ನು ಉದ್ದೇಶಿಸಿ ಅಸಾಧಾರಣವಾದ ದಿಟ್ಟ ಭಾಷೆಯೊಂದಿಗೆ ಪ್ರಾರಂಭವಾಗುತ್ತದೆ:“ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆ.
ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ?ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ.
ನನ್ನ ಮಾತೆಲ್ಲ ಅರಚಾಟ, ‘ಹಿಂಸಾಚಾರ, ಕೊಳ್ಳೆ’ ಇವೇ ನನ್ನ ಕೂಗಾಟ.
ಸರ್ವೇಶ್ವರನ ವಾಕ್ಯವನ್ನು ನಾನು ಸಾರಿದೆ, ಜನರ ನಿಂದೆ ಪರಿಹಾಸ್ಯಕ್ಕೆ ಗುರಿಯಾದೆ.” (ಯೆರೆಮಿಯ 20:7–8).
ಯೆರೆಮಿಯನ ಆಂತರಿಕ ಸಂಘರ್ಷ
9 ನೇ ವಾಕ್ಯ ಯೆರೆಮಿಯನ ಆಂತರಿಕ ತುಮುಲವನ್ನು ತೋರಿಸುತ್ತದೆ: “‘ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು,
ಅವರ ಹೆಸರಿನಲ್ಲಿ ಇನ್ನು ಮಾತಾಡೆನು’ ಎಂದುಕೊಂಡೆನಾದರೆನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ.
ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆಅದನ್ನು ತಡೆತಡೆದು ದಣಿದಿರುವೆ, ಇನ್ನು ಸಹಿಸಲಾಗದಿದೆ.” (ಯೆರೆಮಿಯ 20:9).
"ಅದನ್ನು ತಡೆತಡೆದು ದಣಿದಿರುವೆ" ಎಂಬ ಮಾತು ಜನರಿಗೆ ದೇವರ ಸಂದೇಶವನ್ನು ಘೋಷಿಸದಿರುವ ಅವನ ಪ್ರಯತ್ನದಿಂದ ಆಗುತ್ತಿರುವ ಆಯಾಸವನ್ನು ಬಹಿರಂಗಪಡಿಸುತ್ತದೆ. ಯೆರೆಮಿಯ ತನ್ನನ್ನು ಅಸಾಧ್ಯವಾದ ಪರಿಸ್ಥಿತಿಯಲ್ಲಿ ನೋಡುತ್ತಾನೆ: ಮಾತನಾಡುವುದು ಕಿರುಕುಳವನ್ನು ತರುತ್ತದೆ, ಆದರೆ, ಮೌನ ಆಂತರಿಕ ಹಿಂಸೆಯನ್ನು ತರುತ್ತದೆ. ಈ ವಿರೋಧಾಭಾಸ ತೀವ್ರವಾದ ಭಾವನಾತ್ಮಕ ತೊಯ್ದಾಟವನ್ನು ಉಂಟುಮಾಡುತ್ತದೆ, ಅವನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.
ಹತಾಶೆಗೆ ಸಿಲುಕಿ ಅವನ ಜನನವನ್ನೂ ಶಪಿಸುತ್ತಾನೆ
ಕಿರುಕುಳದಿಂದ ಮತಿವಿಕಲ್ಪಕ್ಕೆ
ವಾಕ್ಯ 10 ನಿರಂತರ ವಿರೋಧ ಯೆರೆಮಿಯನ ಮಾನಸಿಕ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ತೋರಿಸುತ್ತದೆ:“ಸುತ್ತಮುತ್ತಲು ದಿಗಿಲೆಂದರೆ ದಿಗಿಲು!
‘ಬನ್ನಿ, ಇವನ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು’
ಎಂದು ಗುಸುಗುಟ್ಟುತ್ತಿರುವರು ಬಹುಜನರು.
‘ಇವನು ಎಡವಿಬೀಳಲಿ, ನಾವು ಹೊಂಚಿನೋಡುವೆವು’
ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು.
‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’
ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ.” (ಯೆರೆಮಿಯ 20:10).
ವಿಶ್ವಾಸದ ಸಂಕ್ಷಿಪ್ತ ದೃಢೀಕರಣ
11–13ನೇ ವಚನಗಳಲ್ಲಿ, ಯೆರೆಮಿಯ ದೇವರ ಸಾನಿಧ್ಯ ಮತ್ತು ಶಕ್ತಿಯನ್ನು ದೃಢೀಕರಿಸಲು ತನ್ನ ಪ್ರಲಾಪದಿಂದ ತಾತ್ಕಾಲಿಕವಾಗಿ ಹೊರಬರುತ್ತಾನೆ:“ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯಸಾಧಿಸದೆ.
ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆಶಾಶ್ವತ ಅವಮಾನಕ್ಕೆ ಗುರಿಯಾಗುವರುಎಂದಿಗೂ ಮರೆಯಲಾಗದಂತೆ.
ಸರ್ವಶಕ್ತರಾದ ಸರ್ವೇಶ್ವರಾ,
ನೀವು ಸತ್ಪುರುಷರನ್ನು ಪರಿಶೋಧಿಸುವವರುಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು.
ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನುನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನುನಾನು ನೋಡುವಂತೆ ಮಾಡಿ.
ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ.
ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ.” (ಯೆರೆಮಿಯ 20:11–13).
ವಿಶ್ವಾಸದ ಈ ದೃಢೀಕರಣ ಹತಾಶೆಯಿಂದ ಕ್ಷಣಿಕ ಶಾಂತಿಯನ್ನು ನೀಡುತ್ತದೆ. ಯೆರೆಮಿಯ ದೇವರ ಸಮರ್ಥನೆಯಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ ಮತ್ತು ದೇವರನ್ನು ಸ್ತುತಿಸಲು ಇತರರನ್ನು ಸಹ ಕರೆಯುತ್ತಾನೆ (ವಚನ 13). ಆದರೂ, ಅವನ ಪ್ರಲಾಪಕ್ಕೆ ಹೋಲಿಸಿದರೆ ಈ ಭಾಗದ ಸಂಕ್ಷಿಪ್ತತೆ ಅವನ ಮನಸ್ಸು ದುರ್ಬಲವಾಗುತ್ತಿದೆ ಎಂಬುದನ್ನು ಸೂಚ್ಯವಾಗಿ ತೋರಿಸುತ್ತದೆ.
ಅಂತಿಮ ಹತಾಶೆಗೆ ಕುಗ್ಗಿಹೋಗುತ್ತಾನೆ
ವಿಶ್ವಾಸದ ಈ ಸಂಕ್ಷಿಪ್ತ ಅಭಿವ್ಯಕ್ತಿಯ ನಂತರವೂ ಯೆರೆಮಿಯ ಮತ್ತೆ ಅಗಾಧವಾದ ಹತಾಶೆಗೆ ಮುಳುಗುತ್ತಾನೆ:“ಶಪಿಸಲ್ಪಡಲಿ ನಾ ಹುಟ್ಟಿದಾ ದಿನವು!
ಶುಭವೆನಿಸಿಕೊಳ್ಳದಿರಲಿ ತಾಯಿ ನನ್ನನ್ನು ಹೆತ್ತಿದಾ ದಿನವು.
ಶಪಿಸಲ್ಪಡಲಿ ‘ನಿನಗೆ ಗಂಡು ಹುಟ್ಟಿದೆ’ ಎಂದುನನ್ನ ತಂದೆಗೆ ತಿಳಿಸಿದಾತ!
ಕೇವಲ ಸಂತಸವನ್ನು ನನ್ನ ತಂದೆಯಲ್ಲಿಉಂಟುಮಾಡಿದಾತ.
ಸರ್ವೇಶ್ವರನು ಕನಿಕರಿಸದೆ ಕೆಡವಿಬಿಟ್ಟಪಟ್ಟಣದ ಗತಿ ಅವನಿಗಾಗಲಿ!
ಬೆಳಿಗ್ಗೆ ಕಿರುಚಾಟ, ನಡುಹಗಲಲ್ಲಿ ಕೂಗಾಟಅವನ ಕಿವಿಗೆ ಬೀಳಲಿ!
ತಾಯಗರ್ಭದಲ್ಲಿರುವಾಗಲೆ ಅವನೇಕೆ ನನ್ನನ್ನು ಕೊಂದುಹಾಕಲಿಲ್ಲ?
ಆಗ ನನ್ನ ತಾಯೇ ನನಗೆ ಗೋರಿಯಾಗುತ್ತಿದ್ದಳಲ್ಲಾ!
ಆಕೆಯ ಗರ್ಭ ಸದಾ ಬಸಿರಾಗಿಯೇ ಇರುತ್ತಿತ್ತಲ್ಲಾ!
ಗರ್ಭ ಬಿಟ್ಟು ನಾನೇಕೆ ಹೊರಬಂದೆ?
ಕಷ್ಟದುಃಖಗಳನ್ನು ಅನುಭವಿಸುವುದಕ್ಕೊ?
ಅವಮಾನದಲ್ಲೆ ಬಾಳಿನ ದಿನಗಳನ್ನೆಲ್ಲ ಕಳೆಯುವುದಕ್ಕೊ?” (ಯೆರೆಮಿಯ 20:14–18).
ಇಂದಿನ ಪ್ರವಾದಿತನದ ಸೇವೆಗೆ ಅನ್ವಯಿಕೆ
ಯೆರೆಮಿಯನ ಈ ಆರನೇ ವಿಖ್ಯಾಪನೆ ಯಾವುದೇ ಕಾಲದಲ್ಲಿ ಪ್ರವಾದಿಯ ಸೇವೆಯೊಂದಿಗೆ ಪ್ರವಾದಿಗೆ ಬರುವ ಮಾನಸಿಕ ಮತ್ತು ಆಧ್ಯಾತ್ಮಿಕ ಹೋರಾಟಗಳ ಬಗ್ಗೆ ಗಂಭೀರ ಒಳನೋಟವನ್ನು ನೀಡುತ್ತದೆ.ಭಾವನಾತ್ಮಕ ಮತ್ತು ಮಾನಸಿಕ ಒತ್ತಡ (Emotional and Psychological Strain)
ಆಧುನಿಕ ದಿನದ ಪ್ರವಾದಿಗಳು – ಸುವಾರ್ತಾ ಪ್ರಸಾರ ಕಾರ್ಯಕರ್ತರು, ಸತ್ಯ ನುಡಿಯುವವರು ಮತ್ತು ಸಮಾಜ ಸುಧಾರಕರು ಅಥವಾ ಸೇವಕರು - ಆಗಾಗ್ಗೆ ಒಂಟಿತನ, ಅಪಹಾಸ್ಯ ಮತ್ತು ಭಾವನಾತ್ಮಕ ಉರಿಯನ್ನು ಅನುಭವಿಸಬೇಕಾಗುತ್ತದೆ. ನಿಷ್ಠೆ ಮತ್ತು ವಿಶ್ವಾಸ ನೋವು-ಕಷ್ಟಗಳನ್ನು ತರುವುದಿಲ್ಲ ಎಂಬುದಕ್ಕೆ ಖಾತರಿಯಿಲ್ಲ ಎಂಬುದನ್ನು ಯೆರೆಮಿಯನ ಘಟನೆ ನಮಗೆ ಕಲಿಸುತ್ತದೆ. ಅಷ್ಟೇ ಸಹಜವಾಗಿ, ನಿಜವಾದ ಪ್ರವಾದಿಗಳ ಸಂಕಟಗಳು ಅನೇಕ ಬಾರಿ ತಮ್ಮ ಸ್ವಂತ ಧಾರ್ಮಿಕ ವ್ಯವಸ್ಥೆಗಳಿಂದಲೂ ಹಗೆತನದಿಂದಲೂ ಬರುತ್ತವೆ.ದೇವರೊಂದಿಗೆ ಹೋರಾಡುವುದು (Wrestling with God)
ದೇವರ ವಿರುದ್ಧ ಯೆರೆಮಿಯ ಮಾಡಿದ ಆರೋಪಗಳು ಸರಳ, ಪ್ರಾಮಾಣಿಕ ಪ್ರಾರ್ಥನೆಯ ರೂಪವನ್ನು ತೋರಿಸುತ್ತವೆ. ಅವನು ತನ್ನ ಭಾವನೆಗಳನ್ನು ನಿಗ್ರಹಿಸುವುದಿಲ್ಲ ಆದರೆ ಅವುಗಳಿಂದ ದೇವರೊಂದಿಗೆ ಸಂವಾದಿಸುತ್ತಾನೆ. ಇದು ನಮ್ಮ ಕಾಲದ ಆಧುನಿಕ ಪ್ರವಾದಿಗಳ ಧ್ವನಿ ದುರ್ಬಲ ವಿಶ್ವಾಸದ ಸಂಕೇತವಲ್ಲ, ಬದಲಿಗೆ, ಅದು ದೇವರೊಂದಿಗಿನ ಒಡನಾಟದ ಸಲುಗೆ ಎಂದು ಸ್ವೀಕರಿಸಬಹುದು.ದೈವಿಕ ಬಲವಂತ ಮತ್ತು ನಿರಂತರತೆ (Divine Compulsion and Persistence)
ಅವನ ನೋವಿನ ಹೊರತಾಗಿಯೂ, ದೇವರ ವಾಕ್ಯ ಅವನ ಮೂಳೆಗಳಲ್ಲಿ ಬೆಂಕಿಯಂತೆ ದಹಿಸುತ್ತಿದೆ ಎಂದು ಯೆರೆಮಿಯ ಒಪ್ಪಿಕೊಳ್ಳುತ್ತಾನೆ. ಬಾಹ್ಯ ವ್ಯಕ್ತಿಗಳು, ವಿಷಯಗಳು ವಿಫಲವಾದಾಗಲೂ, ಆಂತರಿಕ ಶಕ್ತಿ ಪ್ರವಾದಿಯನ್ನು ಉತ್ತೇಜಿಸುತ್ತದೆ. ನಮ್ಮ ಸಮಕಾಲೀನ ಪ್ರವಾದಿತನದ ಸೇವೆ ಜನಪ್ರಿಯ ಬೆಂಬಲವನ್ನು ಅವಲಂಬಿಸದೆ, ದೇವರು ನೀಡುವ ಸಮರ್ಥನೆ ಮತ್ತು ಅನುಗ್ರಹವನ್ನು ಅವಲಂಬಿಸಿರಬೇಕು ಎಂಬುದನ್ನು ಕಲಿಸುತ್ತದೆ.ಸಂತೋಷ ಮತ್ತು ದುಃಖದ ವಿರೋಧಾಭಾಸ (The Paradox of Joy and Suffering)
ಯೆರೆಮಿಯ ಹತಾಶೆ ಮತ್ತು ಸ್ತೋತ್ರದ ನಡುವೆ ಆಂದೋಲನಕ್ಕೆ ಒಳಗಾಗುತ್ತಾನೆ (ವಾ 11–13). ವ್ಯವಸ್ಥಿತ ಪ್ರತಿರೋಧದ ನಡುವೆ ನ್ಯಾಯವನ್ನು ಹುಡುಕುವ ಆಧುನಿಕ ಸೇವಾಕಾರ್ಯಗಳಲ್ಲಿ ಈ ಭಾವನಾತ್ಮಕ ವಿರೋಧಾಭಾಸಗಳು ಸಾಮಾನ್ಯ ಎಂಬುದನ್ನು ಗ್ರಹಿಸಬೇಕು. ಪ್ರವಾದಿಯ ಮಾರ್ಗ ಅಳು ಮತ್ತು ಆರಾಧನೆ, ಪ್ರಲಾಪ ಮತ್ತು ಭರವಸೆಯ ಮಾರ್ಗ ಎಂಬುದನ್ನು ಈ ವಿಖ್ಯಾಪನೆ ತಿಳಿಸಿಕೊಡುತ್ತದೆ.ಸಮಾರೋಪ
ಯೆರೆಮಿಯನ ಆರನೇ ವಿಖ್ಯಾಪನೆ ಪ್ರವಾದಿಯ ಸೇವೆಯ ಆಳವಾದ ಭಾವನಾತ್ಮಕ ಸಂಕಟಗಳನ್ನು ಬಹಿರಂಗಪಡಿಸುತ್ತದೆ. ದೇವರ ಬಲವಂತದಿಂದ, ಸಾರ್ವಜನಿಕ ನಿರಾಕರಣೆಯಿಂದ, ವೈಯಕ್ತಿಕ ಹತಾಶೆಗೆ ಒಳಪಡುವ ಪ್ರವಾದಿಯ ಜೀವನದ ಸಂಕೀರ್ಣತೆಯನ್ನು ಈ ವಿಖ್ಯಾಪನೆ ತೋರಿಸಿಕೊಡುತ್ತದೆ. ಅವನ ಸ್ವಂತ ಜನನವನ್ನು ಶಪಿಸಿಕೊಳ್ಳುವ ಪರಾಕಾಷ್ಠೆಯಾದ ಅವನ ಪ್ರಲಾಪದ ಪ್ರಾಮಾಣಿಕ ಅಭಿವ್ಯಕ್ತಿ, ಸಮಕಾಲೀನ ಓದುಗರಿಗೆ ವಿಶ್ವಾಸದ ಸಾಕ್ಷಿಯಾಗಲು ತೆರಬೇಕಾಗುವ ವೈಯಕ್ತಿಕ ಬೆಲೆಯನ್ನು ಗ್ರಹಿಸುವಂತೆ ಮಾಡುತ್ತದೆ.
Comments
Post a Comment