ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ

 

(ಸಿಸ್ಟೀನ್ ಚಾಪೆಲ್ ಛಾವಣಿಯಲ್ಲಿ ರಚಿಸಲಾಗಿರುವ ಮೈಕೆಲ್ಯಾಂಜೆಲೊ ಅವರ ಪ್ರವಾದಿ ಯೆರೆಮೀಯ)

 ಯೆರೆಮೀಯನನ್ನು "ಅಳುವ ಪ್ರವಾದಿ (weeping prophet)" ಎಂದು ಕರೆಯಲಾಗುತ್ತಿತ್ತು. ಆದರೆ, ಅದಕ್ಕಿಂತಲೂ ಮಿಗಿಲಾಗಿ, ಯೆರೆಮೀಯನದ್ದು ಪ್ರಾರ್ಥಿಸುವ ಪ್ರವಾದಿಯಾಗಿ ಎದ್ದು ಕಾಣುವ ವ್ಯಕ್ತಿತ್ವ. ಅವನ ಪ್ರಾರ್ಥನೆಗಳು, ಆಳವಾದ ವೇದನೆ, ಕರುಣೆಗಾಗಿ ಹಂಬಲ ಮತ್ತು ಅಚಲ ವಿಶ್ವಾಸದಿಂದ ತುಂಬಿರುವುದನ್ನು ಕಾಣಬಹುದು, ಅವು ದೇವರೊಂದಿಗಿನ ಅವನ ನಿಕಟ ಬಾಂದವ್ಯವನ್ನು ಪ್ರತಿಬಿಂಬಿಸುತ್ತವೆ. ಯೆರೆಮೀಯನ ಗ್ರಂಥದಾದ್ಯಂತ, ಅವನ ಪ್ರಾರ್ಥನೆಗಳು ಹೃತ್ಪೂರ್ವಕ ಪ್ರಲಾಪಗಳಿಂದ ಹಿಡಿದು ಉತ್ಸಾಹಭರಿತ ಮಧ್ಯಸ್ಥಿಕೆಗಳವರೆಗೆ ಇವೆ.

ಯೆರೆಮೀಯನ ಪ್ರಾರ್ಥನೆಗಳು ಅವನ ವೈಯಕ್ತಿಕ ತೊಳಲಾಟಗಳು ಮತ್ತು ಜೂಡಾದ ಜನರಿಗಾಗಿ ಅವನು ಹೊತ್ತ ಹೊರೆ ಇದನ್ನು ಬಹಿರಂಗಪಡಿಸುತ್ತವೆ. ಅವನು ಆ ಜನರ ಪರವಾಗಿ ದೇವರಲ್ಲಿ ಬೇಡಿಕೊಂಡನು, ಅವರ ಪಾಪಕ್ಕಾಗಿ ದುಃಖಪಟ್ಟನು ಮತ್ತು ದೇವರ ಹಸ್ತಕ್ಷೇಪಕ್ಕಾಗಿ ಬಯಸಿದನು. ಅವನ ಪಶ್ಚಾತ್ತಾಪ ಮತ್ತು ಹತಾಶೆಯ ವಿಖ್ಯಾಪನೆಗಳು ಅವನ ಮೃದು ಹೃದಯವನ್ನು ತೋರಿಸುತ್ತವೆ, ಹಾಗೂ ಅವು ಯಾವಾಗಲೂ ದೇವರ ಶಕ್ತಿ ಮತ್ತು ಅವರ ಸಾರ್ವಭೌಮತ್ವದಲ್ಲಿ ಅವನಿಗಿದ್ದ ವಿಶ್ವಾಸದ ಅಭಿವ್ಯಕ್ತಿಯೊಂದಿಗೆ ಕೊನೆಗೊಳ್ಳುತ್ತವೆ.

ಯೆರೆಮೀಯನ ಪ್ರಾರ್ಥನೆಗಳ ಗಮನಾರ್ಹ ಅಂಶವೆಂದರೆ ಅವುಗಳಲ್ಲಿ ಕಂಡುಬರುವ ನಿರ್ಮಲ ಪ್ರಾಮಾಣಿಕತೆ. ಅವನು ದೇವರ ನ್ಯಾಯವನ್ನು ಪ್ರಶ್ನಿಸಲು ಅಥವಾ ತನ್ನದೇ ಆದ ಅನುಮಾನ ಮತ್ತು ಭಯದ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿರಲಿಲ್ಲ. ಈ ಪಾರದರ್ಶಕತೆಯೇ ಅವನ ಪ್ರಾರ್ಥನೆಗಳನ್ನು ಸಾಪೇಕ್ಷ ಮತ್ತು ಶಕ್ತಿಯುತವಾಗಿಸಿದ್ದವು, ದೇವರೊಂದಿಗಿನ ಸಂಬಂಧದಲ್ಲಿ ದೃಢೀಕರಣದ ಮಹತ್ವವನ್ನು ಪ್ರದರ್ಶಿಸಿದ್ದವು.

ಇದಲ್ಲದೆ, ಯೆರೆಮೀಯನ ಪ್ರಾರ್ಥನೆಗಳು ದೇವರೊಂದಿಗಿನ ಸಂವಹನಕ್ಕೆ ಒಂದು ಮಾರ್ಗವಾಗಿತ್ತು, ಹೀಗೆ ಅವು ದೇವರ ಸಂದೇಶಗಳನ್ನು ಜನರಿಗೆ ತಂದವು. ಅವನ ಪ್ರಾರ್ಥನೆಗಳು ಕೇವಲ ವೈಯಕ್ತಿಕವಾಗಿರಲಿಲ್ಲ; ಅವು ಪ್ರವಾದನೆಗಳಾಗಿದ್ದವು, ದೇವರ ಚಿತ್ತವನ್ನು ಪ್ರಕಟಪಡಿಸುತ್ತಿದ್ದವು ಮತ್ತು ಜನರು ಪಶ್ಚಾತ್ತಾಪಪಡಲು ಪ್ರೇರೇಪಿಸುತ್ತಿದ್ದವು.

 

ಮಧ್ಯಸ್ಥಿಕನಾಗಿ ಯೆರೆಮೀಯ

ಬೈಬಲ್ ಸಂಪ್ರದಾಯದಲ್ಲಿ ಅತ್ಯಂತ ಪ್ರಭಾವಿ ಮಧ್ಯಸ್ಥಿಕರಾದ ಮೋಶೆ ಮತ್ತು ಸಮುವೇಲರಂತಹ ವ್ಯಕ್ತಿಗಳೊಡನೆ ಯೆರೆಮೀಯನ ಹೆಸರು ಒಂದಾಗಿ ನಿಲ್ಲುತ್ತದೆ. ಬ್ಯಾಬಿಲೋನ್‌ ಜೂಡಾವನ್ನು ಮೊದಲನೆ ಬಾರಿ ನಾಶಮಾಡಿದ ಸಂದರ್ಭದಲ್ಲಿ (ಕ್ರಿ.ಪೂ. 627–586) ಆಗ, ಯೆರೆಮೀಯನ ಸೇವೆ, ದೇವರ ತೀರ್ಪಿನ ಪ್ರವಾದನೆ ಮತ್ತು ಜನರ ಮೇಲಿನ ಅವನ ನಿಷ್ಕಪಟ ಪ್ರೀತಿಯ ನಡುವೆ ಸಿಲುಕಿರುವ ವ್ಯಕ್ತಿಯನ್ನು ಅಲ್ಲಿ ಕಾಣಬಹುದು. ದೇವರು ಮತ್ತು ಮನುಷ್ಯರ ನಡುವೆ ನಿಂತಿರುವ ಮಧ್ಯಸ್ಥಿಕನಾಗಿ ಯೆರೆಮೀಯನ ಪಾತ್ರ ಪ್ರವಾದನೆಗಳ ಸಂಕೀರ್ಣ ಸ್ವರೂಪವನ್ನು ತೋರಿಸುತ್ತದೆ.

ದೇವರ ಸಂದೇಶಗಳನ್ನು ಸರಳವಾಗಿ ತಲುಪಿಸಿದ ಅನೇಕ ಪ್ರವಾದಿಗಳಿಗಿಂತ ಭಿನ್ನವಾಗಿ, ಯೆರೆಮೀಯ ದೇವರ ನ್ಯಾಯ ಮತ್ತು ಅವರ ಕರುಣೆಯ ನಡುವಿನ ಉದ್ವಿಗ್ನತೆಯನ್ನು ತೋರಿಸಿಕೊಡುತ್ತಾನೆ. ಅವನ ಮಧ್ಯಸ್ಥಿಕೆಯ ಪಾತ್ರ ಅವನಿಗೆ ದೇವರಿತ್ತ ಕರೆಯಿಂದಲೇ ಪ್ರಾರಂಭವಾಯಿತು, ಅಲ್ಲಿ ದೇವರು ಅವನನ್ನು "ಕೀಳಲು ಮತ್ತು ಕೆಡವಲು, ನಾಶಮಾಡಲು ಮತ್ತು ಉರುಳಿಸಲು, ನಿರ್ಮಿಸಲು ಮತ್ತು ನೆಡಲು" ನೇಮಿಸಿದರು (ಯೆರೆಮೀಯ 1:10). ಈ ದ್ವಂದ್ವ ಆದೇಶ ಯೆರೆಮೀಯನನ್ನು ವಿನಾಶವನ್ನು ಘೋಷಿಸುವ ಮತ್ತು ಅದೇ ಸಮಯದಲ್ಲಿ ಪುನಃಸ್ಥಾಪನೆಯನ್ನು ಸಾರುವ ಕಷ್ಟಕರ ಸನ್ನಿವೇಶಕ್ಕೆ ನೂಕಿತ್ತು.

ಪ್ರವಾದಿಯ ಮಧ್ಯಸ್ಥಿಕೆ ಅವನ ಪ್ರಾರ್ಥನೆಗಳಲ್ಲಿ ಅತ್ಯಂತ ಶಕ್ತಿಶಾಲಿಯಾಗಿ ಪ್ರಕಟವಾಗುತ್ತದೆ. ತನ್ನ ಪುಸ್ತಕದ ಉದ್ದಕ್ಕೂ, ಯೆರೆಮೀಯ ತನ್ನ ದಾರಿ ತಪ್ಪಿದ ರಾಷ್ಟ್ರದ ಪರವಾಗಿ ದೇವರಲ್ಲಿ ಬೇಡಿಕೊಳ್ಳುವುದನ್ನು ನಾವು ನೋಡುತ್ತೇವೆ. ಅವನು "ನಮ್ಮೊಂದಿಗಿನ ನಿಮ್ಮ ಒಡಂಬಡಿಕೆಯನ್ನು ನೆನಪಿಡಿ ಮತ್ತು ಮುರಿಯಬೇಡಿ" (ಯೆರೆಮೀಯ 14:21) ಎಂದು ಕೂಗುತ್ತಾನೆ, ಅವರ ನಿರಂತರ ಬಂಡಾಯದ ಹೊರತಾಗಿಯೂ ಅವರ ಪರವಾಗಿ ವಕಾಲತ್ತು ವಹಿಸುವ ತನ್ನ ಇಚ್ಛೆಯನ್ನು ಪ್ರದರ್ಶಿಸುತ್ತಾನೆ. ಈ ಪ್ರಾರ್ಥನೆಗಳು ಯೆರೆಮೀಯನ ಕರುಣಾಳು ಹೃದಯವನ್ನು ತೋರಿಸುತ್ತವೆ. ಯೆರಮೀಯ, ದೇವರ ನೀತಿವಂತ ಕೋಪ ಮತ್ತು ಅವನ ಜನರ ಸನ್ನಿಹಿತವಾದ ಸಂಕಟ ಎರಡನ್ನೂ ಅನುಭವಿಸುತ್ತಾನೆ.

ವಿರೋಧಾಭಾಸವಾಗಿ, ದೇವರು ಕೆಲವೊಮ್ಮೆ ಯೆರೆಮೀಯನನ್ನು ಮಧ್ಯಸ್ಥಿಕೆ ವಹಿಸುವುದನ್ನು ನಿಷೇಧಿಸುತ್ತಾರೆ. ಯೆರೆಮೀಯ 7:16 ರಲ್ಲಿ, ದೇವರು ಆಜ್ಞಾಪಿಸುವುದು: "ನೀನು ಈ ಜನರಿಗಾಗಿ ಪ್ರಾರ್ಥಿಸಬೇಡ, ಅವರ ಪರವಾಗಿ ಮೊರೆ ಅಥವಾ ಪ್ರಾರ್ಥನೆಯನ್ನು ಎತ್ತಬೇಡ, ಮತ್ತು ನನ್ನೊಂದಿಗೆ ಮಧ್ಯಸ್ಥಿಕೆ ವಹಿಸಬೇಡ, ಏಕೆಂದರೆ, ನಾನು ನಿನ್ನನ್ನು ಕೇಳುವುದಿಲ್ಲ." ಈ ದೈವಿಕ ನಿಷೇಧ ಜೂಡಾದ ಪಾಪದ ಗುರುತ್ವವನ್ನು ಒತ್ತಿಹೇಳುತ್ತದೆ ಮತ್ತು ಯೆರೆಮೀಯ ತನ್ನ ಜನರಿಗಾಗಿ ಪ್ರಾರ್ಥಿಸಿದನು ಎಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ. ಯೆರೆಮೀಯ ತನ್ನ ಜನರ ಪರವಾಗಿ ಮಧ್ಯಸ್ಥಿಕನಾಗಿ ಕಾರ್ಯನಿರ್ವಹಿಸದಿದ್ದರೆ ದೇವರು ಯೆರೆಮೀಯ ಪ್ರಾರ್ಥಿಸುವುದನ್ನು ನಿಷೇಧಿಸುವ ಅಗತ್ಯವಿರಲಿಲ್ಲ.

ಯೆರೆಮೀಯನ ಮಧ್ಯಸ್ಥಿಕೆಯ ಪಾತ್ರಕ್ಕೆ ಅವನು ಬೆಲೆ ತೆರಬೇಕಾಯಿತು. ದೇವರ ಮಾತುಗಳಿಗಾಗಿ, ಅವನ ನಿಷ್ಠೆಗಾಗಿ ಅವನನ್ನು ತಿರಸ್ಕರಿಸಲಾಯಿತು, ಹೊಡೆಯಲಾಯಿತು, ಸೆರೆಮನೆಗೆ ಹಾಕಲಾಯಿತು ಮತ್ತು ಬಹುತೇಕ ಮರಣದಂಡನೆಗೆ ಒಳಪಡಿಸಲಾಯಿತು. ದೇವರ ಕರುಣೆಗಾಗಿ ಅವನು ಮಾಡುವ ಪ್ರಾರ್ಥನೆಗಳು ಅವನು ಅನುಭವಿಸಿದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವೇದನೆಯನ್ನು ಬಹಿರಂಗಪಡಿಸುತ್ತವೆ. ಈ ಪ್ರಲಾಪಗಳಲ್ಲಿ, ದೇವರಿಗೆ ನಿಷ್ಠೆ ಮತ್ತು ಅವನ ಜನರ ಮೇಲಿನ ಪ್ರೀತಿಯ ನಡುವೆ ಯೆರೆಮೀಯನ ಹೃದಯ ಹರಿದುಹೋಗಿರುವುದನ್ನು ನಾವು ನೋಡುತ್ತೇವೆ. "ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ?” ಎಂದು ಯೆರೆಮೀಯ 15:18 ರಲ್ಲಿ ಅಳುತ್ತಾನೆ, ಅವನ ಮಧ್ಯಸ್ಥಿಕೆಯ ಸೇವೆಯೊಂದಿಗೆ ಬಂದ ಹೇಳಲಾಗದಷ್ಟು ಸಂಕಟವನ್ನು ನಾವು ಇಲ್ಲಿ ಕಾಣಬಹುದು.

ಬಹುಶಃ, ಅತ್ಯಂತ ಭಾವನಾತ್ಮಕವಾಗಿ, ಯೆರೆಮೀಯ ಕೇವಲ ಪದಗಳ ಮೂಲಕವಲ್ಲ, ಅವನ ಜೀವನದುದ್ದಕ್ಕೂ ಮಧ್ಯಸ್ಥಿಕೆ ವಹಿಸಿದನು. ಅವನು ಜೆರುಸಲೇಮ್ ನಾಶವಾದ ಸಮಯದಲ್ಲಿ ಅಲ್ಲಿಯೇ ಇದ್ದನು, ನೋವು ಅನುಭವಿಸುತ್ತಿದ್ದವರೊಂದಿಗೆ ಅಳುತ್ತಿದ್ದನು. ಜೆರುಸಲೇಮಿನ ಪತನದ ನಂತರವೂ, ಸಾಂತ್ವನಕ್ಕಾಗಿ ಬ್ಯಾಬಿಲೋನ್‌ಗೆ ಹೋಗುವ ಆಯ್ಕೆಯನ್ನು ನೀಡಿದಾಗ, ಅವನು ನಾಡಿನಲ್ಲಿ ಉಳಿದವರೊಂದಿಗೆ ಉಳಿಯಲು ಬಯಸಿದನು, ಅತ್ಯಂತ ದುರ್ಬಲರ ಮಧ್ಯೆ ಅವನ ಮಧ್ಯಸ್ಥಿಕೆ ಅಗತ್ಯವೆಂದು ತಿಳಿದಿದ್ದನು.

ನ್ಯಾಯವನ್ನು ಕರುಣೆಯನ್ನು ಬೇರೆಬೇರೆ ಎಂದು ಆಲೋಚಿಸುವ ಕಾಲದಲ್ಲಿ, ಯೆರೆಮೀಯನ ಮಧ್ಯಸ್ಥಿಕೆಯ ಸೇವೆ ನಿಜವಾದ ಪ್ರವಾದನೆ ಎಂಬುದು ಆ ಎರಡನ್ನೂ ಒಟ್ಟಾಗಿ ಹೊಂದಿರುತ್ತದೆ ಎಂಬುದನ್ನು ನಮಗೆ ನೆನಪಿಸುತ್ತದೆ. ನಿಜವಾದ ಮಧ್ಯಸ್ಥಿಕೆ ಎಂದರೆ ದೇವರು ಮತ್ತು ಮಾನವರ ನಡುವೆ ನಿಲ್ಲುವುದು ಮಾತ್ರವಲ್ಲ, ಅದು ಅತ್ಯಂತ ದುಃಖಕ್ಕೆ ಕಾರಣವಾಗುವುದಾದರೂ, ದೇವರ ನ್ಯಾಯಪರತೆ ಮತ್ತು ಮಾನವ ಅನುಕಂಪ ಎರಡನ್ನೂ ಹೊಂದಿರುತ್ತದೆ ಎಂಬುದನ್ನು ಯೆರೆಮಿಯಾ ಪ್ರದರ್ಶಿಸುತ್ತಾನೆ.

 

ದೇವರು ಯೆರೆಮೀಯನು ಜನರಿಗಾಗಿ ಪ್ರಾರ್ಥಿಸುವುದನ್ನು ನಿಷೇಧಿಸುತ್ತಾನೆ

ಯೆರೆಮೀಯನಿಗೆ ದೇವರ ತೀರ್ಪಿನ ಸಂದೇಶಗಳನ್ನು ಜುಡಾದ ಜನರಿಗೆ ತಲುಪಿಸುವ ಕಷ್ಟಕರವಾದ ಕೆಲಸವನ್ನು ನೀಡಲಾಗಿತ್ತು. ತನ್ನ ಸೇವೆಯ ಉದ್ದಕ್ಕೂ, ಅವನು ತನ್ನ ರಾಷ್ಟ್ರಕ್ಕಾಗಿ ಪ್ರಾರ್ಥಿಸುತ್ತಾ, ತನ್ನ ಜನರಿಗಾಗಿ ದೇವರ ಕರುಣೆಯನ್ನು ಬೇಡಿಕೊಂಡನು. ಆದಾಗ್ಯೂ, ದೇವರು ಯೆರೆಮೀಯನಿಗೆ ಜನರಿಗಾಗಿ ಪ್ರಾರ್ಥಿಸಬಾರದೆಂದು ಸ್ಪಷ್ಟವಾಗಿ ಆಜ್ಞಾಪಿಸಿದ ಮೂರು ಸಂದರ್ಭಗಳಿವೆ.

 

ಮೊದಲನೆಯ ಬಾರಿ ನಿಷೇಧ

“ಯೆರೆಮೀಯನೇ, ನೀನಂತು ಈ ಜನರಿಗಾಗಿ ಬೇಡಿಕೊಳ್ಳಬೇಡ. ಇವರ ಪರವಾಗಿ ಮೊರೆ ಇಡಬೇಡ. ಪ್ರಾರ್ಥಿಸಲೂ ಬೇಡ, ನನ್ನ ಬಳಿ ವಿಜ್ಞಾಪಿಸಲೂ ಬೇಡ. ನಾನು ಅದನ್ನು ಕೇಳಲಾರೆ.” (ಯೆರೆಮೀಯ 7:16).

ದೇವಾಲಯದ ಆರಾಧನೆಯ ಕಪಟತನವನ್ನು ದೇವರು ಖಂಡಿಸುವ ಸಂದರ್ಭದಲ್ಲಿ ಈ ಆಜ್ಞೆ ಕಂಡುಬರುತ್ತದೆ. ಯೆರೆಮೀಯ 7:1–15ನೆಯ ವಚನಗಳಲ್ಲಿ, ದೇವಾಲಯದಲ್ಲಿ ಜನರು ಹೊಂದಿದ್ದ ಸುಳ್ಳು ವಿಶ್ವಾಸಕ್ಕಾಗಿ ದೇವರು ಅವರನ್ನು ಖಂಡಿಸುತ್ತಾರೆ. ದೇವಾಲಯ ಜೆರುಸಲೆಮಿನಲ್ಲಿರುವುದರಿಂದ, ಅವರ ನಿರಂತರ ಪಾಪ ಮತ್ತು ವಿಗ್ರಹಾರಾಧನೆಯ ಹೊರತಾಗಿಯೂ ಅವರು ತೀರ್ಪಿನಿಂದ ಸುರಕ್ಷಿತರಾಗಿದ್ದಾರೆ ಎಂದು ಅವರು ನಂಬಿದ್ದರು. ಅವರು ಅನ್ಯಾಯದ ಕೃತ್ಯಗಳನ್ನು ಎಸಗಿದರು, ದುರ್ಬಲರನ್ನು ದಬ್ಬಾಳಿಕೆ ಮಾಡಿದರು ಮತ್ತು ಮಕ್ಕಳ ಬಲಿ ಸೇರಿದಂತೆ ಅಸಹ್ಯಕರ ವಿಗ್ರಹಾರಾಧನೆಯಲ್ಲಿಯೂ ತೊಡಗಿದರು (ಯೆರೆಮೀಯ 7:30–31). ದೇವರು ಯೆರೆಮೀಯನಿಗೆ ಈ ಜನರಿಗಾಗಿ ಪ್ರಾರ್ಥಿಸಬಾರದೆಂದು ಹೇಳುತ್ತಾರೆ, ಏಕೆಂದರೆ ಅವರ ಪಾಪಗಳಿಗೆ ದೇವರ ತೀರ್ಪು ಅನಿವಾರ್ಯವಾಗುವ ಹಂತವನ್ನು ತಲುಪಿತ್ತು. ಆ ಜನರು ದೇವರು ಪ್ರವಾದಿಗಳ ಮೂಲಕ ನೀಡಿದ ಎಚ್ಚರಿಕೆಗಳನ್ನು ಪದೇ ಪದೇ ತಿರಸ್ಕರಿಸಿದ್ದರು, ದೇವರ ತಾಳ್ಮೆಯನ್ನು ಅವಕಾಶವಾಗಿ ಬಳಸಿಕೊಳ್ಳಲಿಲ್ಲ. ಇದು ಗಂಭೀರವಾದ ಸತ್ಯವನ್ನು ಬಹಿರಂಗಪಡಿಸುತ್ತದೆ: ಜನರು ರಕ್ಷಣೆಗೆ ಮೀರಿ ತಮ್ಮ ಹೃದಯಗಳನ್ನು ಕಠಿಣಗೊಳಿಸಿಕೊಳ್ಳುವುದರಿಂದ ಮಧ್ಯಸ್ಥಿಕೆ ವ್ಯರ್ಥವಾಗುವ ಹಂತ ತಲುಪುತ್ತದೆ.

 

ಎರಡನೇ ನಿಷೇಧ

ಆದುದರಿಂದ ಯೆರೆಮೀಯನೇ, ಈ ಜನರ ಪರವಾಗಿ ಬೇಡಿಕೊಳ್ಳಬೇಡ. ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಲೂಬೇಡ. ಅವರಿಗೆ ಕೇಡು ಬಂದಾಗ ನನ್ನನ್ನು ಗೋಗರೆದರೂ ನಾನು ಕೇಳುವುದಿಲ್ಲ.” (ಯೆರೆಮೀಯ 11:14).

ಈ ನಿಷೇಧ ಮತ್ತೊಂದು ತೀರ್ಪಿನ ಘೋಷಣೆಯನ್ನು ಅನುಸರಿಸುತ್ತದೆ, ಇಲ್ಲಿ ದೇವರು ಜೂಡಾದ ಜನರ ಪಿತೂರಿಯನ್ನು ಬಹಿರಂಗಪಡಿಸುತ್ತಾರೆ (ಯೆರೆಮೀಯ 11:9–13). ಅವರು ತಮ್ಮ ಪೂರ್ವಜರೊಂದಿಗೆ ಸ್ಥಾಪಿಸಲಾದ ಒಡಂಬಡಿಕೆಯನ್ನು ಉಲ್ಲಂಘಿಸಿದ್ದರು, ವಿಗ್ರಹಾರಾಧನೆಯಲ್ಲಿ ತೊಡಗಿದ್ದರು ಮತ್ತು ದೇವರ ಆಜ್ಞೆಗಳನ್ನು ತ್ಯಜಿಸಿದ್ದರು. ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಅವರು ತಮ್ಮ ದಂಗೆಯಲ್ಲಿಯೇ ಇದ್ದರು, ಮತ್ತು ಈಗ, ಸಂಕಷ್ಟದ ಸಮಯಗಳಲ್ಲಿಯೂ ಸಹ, ದೇವರು ಸಹಾಯಕ್ಕಾಗಿ ಅವರ ಮೊರೆಯನ್ನು ಕೇಳಲಿಲ್ಲ.

ದೇವರು ಅವರ ಪ್ರಾರ್ಥನೆಗಳನ್ನು ಕೇಳಲು ನಿರಾಕರಿಸುವುದು ಜನರ ನಿರಂತರ ಅವಿಧೇಯತೆಯ ಪರಿಣಾಮಗಳನ್ನು ತೋರಿಸುತ್ತದೆ. ಜನರು ಪಶ್ಚಾತ್ತಾಪಪಡಲು ದೇವರು ನೀಡಿದ ಕರೆಗಳನ್ನು ಪದೇಪದೇ ತಿರಸ್ಕರಿಸಿದಾಗ, ದೇವರ ತೀರ್ಪು ಜಾರಿಗೆ ಬರುವ ಸಮಯ ಬರುತ್ತಿದೆ ಮತ್ತು ಅವರು ಎಷ್ಟೇ ಪ್ರಾರ್ಥಿಸಿದರೂ ದೇವರ ತೀರ್ಪನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ. ಈ ಭಾಗ ಒಡಂಬಡಿಕೆಯ ವಿಶ್ವಾಸದ್ರೋಹದ ಪರಿಣಾಮ ಮತ್ತು ದೇವರ ತಾಳ್ಮೆ ಅಪರಿಮಿತವಾಗಿದೆ ಎಂಬ ಆಲೋಚನೆ ಅಪಾಯಕಾರಿಯಾದುದು ಎಂಬುದನ್ನು ಒತ್ತಿಹೇಳುತ್ತದೆ.

 

ಮೂರನೇ ನಿಷೇಧ

"ಸರ್ವೇಶ್ವರ ಮತ್ತೆ ನನಗೆ: “ಈ ಜನರ ಹಿತವನ್ನು ಬಯಸಿ ಇವರಿಗೋಸ್ಕರ ಪ್ರಾರ್ಥನೆ ಮಾಡಬೇಡ. ಇವರು ಉಪವಾಸ ಕೈಗೊಂಡರೂ ಇವರ ಮೊರೆಯನ್ನು ನಾನು ಕೇಳುವುದಿಲ್ಲ. ದಹನಬಲಿಗಳನ್ನೂ ಧಾನ್ಯನೈವೇದ್ಯಗಳನ್ನೂ ಅರ್ಪಿಸಿದರೂ ಸ್ವೀಕರಿಸುವುದಿಲ್ಲ. ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಇವರನ್ನು ಮುಗಿಸಿಬಿಡುತ್ತೇನೆ,” ಎಂದು ಹೇಳಿದರು." (ಯೆರೆಮೀಯ 14:11-12).

ಈ ಆಜ್ಞೆ ತೀವ್ರ ಬರಗಾಲದ ಸಮಯದಲ್ಲಿ ಬಂತು; ಇದು ಜೂಡಾದ ಅವಿಧೇಯತೆಯ ನೇರ ಪರಿಣಾಮವಾಗಿತ್ತು. ಜನರು ಬಹಳವಾಗಿ ಬಳಲುತ್ತಿದ್ದರು; ಇದನ್ನು ಕಂಡ ಯೆರೆಮೀಯ ಕನಿಕರಿಸಿ ಅವರ ಪರವಾಗಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದನು. ಆದರೆ, ದೇವರು ಮತ್ತೆ ಅವರಿಗಾಗಿ ಪ್ರಾರ್ಥಿಸುವುದನ್ನು ನಿಷೇಧಿಸಿದರು. ನೀನು ಮಾತ್ರ ಅಲ್ಲ, ಮೋಶೆ ಅಥವಾ ಸಮುವೇಲ್ ಮಧ್ಯಸ್ಥಿಕೆ ವಹಿಸಿದರೂ ತಾವು ಮಾಡಬೇಕಿರುವುದನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ವಿವರಿಸುತ್ತಾರೆ (ಯೆರೆಮೀಯ 15:1). ಜನರು ಭ್ರಷ್ಟಾಚಾರದ ಅಂತಿಮ ಮಟ್ಟವನ್ನು ತಲುಪಿದ್ದರು, ಅವರಿಗೆ ಶಿಕ್ಷೆ ಖಚಿತವಾಗಿತ್ತು.

ಜೂಡಾದ ಕಷ್ಟಗಳು ತಂತಾನೆ ಎದುರಾದುದಲ್ಲ; ಅದು ಅವರ ಆಯ್ಕೆಗಳ ಪರಿಣಾಮ ಎಂದು ದೇವರು ಸ್ಪಷ್ಟಪಡಿಸುತ್ತಾರೆ. ಅವರು ಶಾಂತಿ ಮತ್ತು ಸುಭದ್ರತೆಯ ಸುಳ್ಳುಗಳನ್ನು ಹೇಳಿದ ಕಪಟ ಪ್ರವಾದಿಗಳನ್ನು ನಂಬಿಕೊಂಡಿದ್ದರು. ಮಾತ್ರವಲ್ಲ, ನಿಜವಾದ ದೇವರ ಬಳಿಗೆ ಹಿಂದಿರುಗಲು ಅವರು ನಿರಾಕರಿಸಿದ್ದರು. ಇದು ದೈವಶಾಸ್ತ್ರದ ಮತ್ತೊಂದು ಪ್ರಮುಖ ತತ್ವವನ್ನು ನಮಗೆ ಕಲಿಸುತ್ತದೆ: ನ್ಯಾಯವನ್ನು ಪುನಃಸ್ಥಾಪಿಸಲು ಮತ್ತು ಜನರನ್ನು ಹೊಣೆಗಾರಿಕೆಗೆ ಕರೆಯಲು ಕೆಲವೊಮ್ಮೆ ದೇವರಿಗೆ ಉಳಿದಿರುವ ಏಕೈಕ ಮಾರ್ಗವೆಂದರೆ, ದಂಡನಾ ತೀರ್ಪು.

 

ಪ್ರಾರ್ಥಿಸಬಾರದೆಂಬ ದೇವರ ಆಜ್ಞೆಯ ಪರಿಣಾಮಗಳು

1. ಮಧ್ಯಸ್ಥಿಕೆಯ ಮಿತಿಗಳು

ಪ್ರಾರ್ಥನೆ, ಶಕ್ತಿಯುತ ಮತ್ತು ಪರಿಣಾಮಕಾರಿಯಾಗಿದ್ದರೂ, ಜನರು ಪಶ್ಚಾತ್ತಾಪ ಪಡದವರಾಗಿದ್ದಲ್ಲಿ ದೇವರು ಮಧ್ಯಸ್ಥಿಕೆಯನ್ನು ಕೇಳಲು ನಿರಾಕರಿಸಬಹುದು. ಜನರು ತಮ್ಮ ಬಂಡಾಯದಲ್ಲಿ ದೃಢವಾಗಿರುವಾಗ ಪ್ರಾರ್ಥನೆ ದೇವರ ನ್ಯಾಯವನ್ನು ಅತಿಕ್ರಮಿಸಲು ಸಾಧ್ಯವಾಗುವಿದಿಲ್ಲ ಎಂಬುದನ್ನು ಯೆರೆಮೀಯನಿಗೆ ಹೇಳಿದ ಮೇಲಿನ ಮಾತುಗಳು ತೋರಿಸುತ್ತವೆ.

 

2. ಹುಸಿ ಭದ್ರತೆಯ ಅಪಾಯ

ಧಾರ್ಮಿಕ ಆಚರಣೆಗಳು ಮತ್ತು ಧಾರ್ಮಿಕ ಸ್ಥಾನಮಾನಗಳು ತಮ್ಮನ್ನು ರಕ್ಷಿಸುತ್ತದೆ ಎಂದು ಜೂಡಾದ ಜನರು ನಂಬಿದ್ದರು, ಆದರೆ ದೇವರು ಈ ಕಪಟ ವಿಶ್ವಾಸವನ್ನು ತಿರಸ್ಕರಿಸಿದರು. ನಿಜವಾದ ವಿಧೇಯತೆ ಮತ್ತು ಪ್ರಾಮಾಣಿಕತೆಯಿಲ್ಲದ ಖಾಲಿ ಧಾರ್ಮಿಕತೆಯ ವಿರುದ್ಧ ದೇವರು ಯೆರೆಮೀಯನಿಗೆ ಹೇಳಿದ ಮೇಲಿನ ಮಾತುಗಳು ನಮ್ಮನ್ನು ಎಚ್ಚರಿಸುತ್ತದೆ.

 

3. ನಿರಂತರ ಪಾಪದ ಪರಿಣಾಮಗಳು

ದೇವರು ಯೆರೆಮೀಯನಿಗೆ ಹೇಳಿದ ಮೇಲಿನ ಮಾತುಗಳು, ನಿರಂತರ ಪಾಪಕೃತ್ಯಗಳು ದೇವರ ತೀರ್ಪನ್ನು ಅನಿವಾರ್ಯವಾಗಿಸಿ ಹಿಂತಿರುಗಲಾಗದ ಹಂತಕ್ಕೆ ಕಾರಣವಾಗಬಹುದು ಎಂಬುದನ್ನು ತೋರಿಸುತ್ತದೆ. ಇದು ನಿರಂತರ ಅವಿಧೇಯತೆಯ ಗಂಭೀರತೆಗೆ ಖಂಡಿತವಾದ ಜ್ಞಾಪನೆಯಾಗಿ ತೋರುತ್ತದೆ.

 

4. ತೀರ್ಪು ಮತ್ತು ಕರುಣೆಯಲ್ಲಿ ದೇವರ ಸಾರ್ವಭೌಮತ್ವ

ದೇವರು ಕರುಣಾಮಯಿ ಮತ್ತು ತಾಳ್ಮೆಯುಳ್ಳವರಾಗಿದ್ದರೂ, ಅವರು ನ್ಯಾಯವಂತರೂ ಕೂಡ. ಮಧ್ಯಸ್ಥಿಕೆಯನ್ನು ತಡೆಹಿಡಿಯುವುದರಲ್ಲಿ ಅವರ ನ್ಯಾಯನೀತಿ ಮೇಲುಗೈ ಸಾಧಿಸುತ್ತದೆ ಎಂಬುದು ಇತಿಹಾಸದಲ್ಲಿ ಲಿಖಿತವಾಗಿವೆ. ಆದರೂ, ಅವರ ಅಂತಿಮ ಗುರಿ ಯಾವಾಗಲೂ ವಿಮೋಚನೆ; ನಂತರ ಬರುವ ಯೆರೆಮೀಯನ ಭವಿಷ್ಯವಾಣಿಗಳಲ್ಲಿ ರಾಷ್ಟ್ರದ ಪುನರುಜ್ಜೀವಿಸುವುದು ಅಥವಾ ಪುನಃಸ್ಥಾಪನೆಯ ವಿಷಯ ಕಂಡುಬರುತ್ತದೆ (ಯೆರೆಮೀಯ 29:11; 31:31–34).

 

ಯೆರೆಮೀಯ ಜೂಡಾದ ಜನರಿಗಾಗಿ ಪ್ರಾರ್ಥಿಸಬಾರದೆಂದು ದೇವರು ಆಜ್ಞಾಪಿಸುವ ಮೇಲಿನ ಮೂರು ಸಂದರ್ಭಗಳು ಮಧ್ಯಸ್ಥಿಕೆ, ತೀರ್ಪು ಮತ್ತು ದೈವಿಕ ನ್ಯಾಯದ ಬಗ್ಗೆ ಗಹನವಾದ ಸತ್ಯಗಳನ್ನು ಪ್ರಕಟಿಸುತ್ತವೆ. ದೇವರು ಕರುಣಾಮಯಿಯಾದರೂ, ಅವರನ್ನು ಮೋಸಗೊಳಿಸಲಾಗದು ಮತ್ತು ನೀತಿವಂತರ ಪ್ರಾರ್ಥನೆಗಳನ್ನು ಸಹ ಪಾಪಿಗಳ ನಿರಂತರ ಬಂಡಾಯ ಹಿಮ್ಮೆಟ್ಟಿಸುತ್ತವೆ. ಅದರೊಂದಿಗೆ, ಯೆರೆಮೀಯನಿಗೆ ದೇವರ ಹೇಳಿದ ಮೇಲಿನ ಮಾತುಗಳು, ನಿಜವಾದ ಪಶ್ಚಾತ್ತಾಪಕ್ಕೆ ಕರೆ ನೀಡುತ್ತವೆ ಮತ್ತು ದೇವರ ಚಿತ್ತಕ್ಕೆ ವಿಧೇಯತೆಯಿಂದ ನಡೆಯುವುದರ ಮಹತ್ವವನ್ನು ನಮಗೆ ನೆನಪಿಸುತ್ತವೆ.

 

ಯೆರೆಮೀಯನ ಆರು ವಿಖ್ಯಾಪನೆಗಳು

ಯೆರೆಮೀಯನ ಸೇವೆಯು ತೀವ್ರವಾದ ವೈಯಕ್ತಿಕ ಹೋರಾಟಗಳಿಂದ ತುಂಬಿದ್ದರೂ ಇದನ್ನು ಹೆಚ್ಚಾಗಿ ಅವನ ತಪ್ಪೊಪ್ಪಿಗೆಗಳ ಮೂಲಕ ವ್ಯಕ್ತಪಡಿಸಲಾಗುತ್ತದೆ. ಯೆರೆಮೀಯನ ತಪ್ಪೊಪ್ಪಿಗೆಗಳು ದೇವರಿಗೆ ದುಃಖ ಮತ್ತು ದೂರುಗಳ ಪ್ರಾರ್ಥನೆಗಳಾಗಿವೆ.

 

ಮೊದಲನೆಯ ವಿಖ್ಯಾಪನೆ: ಯೆರೆಮೀಯ 11:18–23

ಅನಾಥೋತ್ ಜನರು ತನ್ನ ಜೀವನದ ವಿರುದ್ಧ ಮಾಡಿದ ಸಂಚುಗಳ ಬಗ್ಗೆ ಯೆರೆಮೀಯ ವಿಷಾದಿಸುತ್ತಾನೆ. ಇದು ಪ್ರವಾದಿಯ ಸೇವೆಗೆ ಮಾಡಬೇಕಾದ ತ್ಯಾಗ ಮತ್ತು ಸತ್ಯವನ್ನು ಮಾತನಾಡುವವರು ಹೆಚ್ಚಾಗಿ ಎದುರಿಸುವ ವಿರೋಧವನ್ನು ಎತ್ತಿ ತೋರಿಸುತ್ತದೆ.

 

ಎರಡನೇ ವಿಖ್ಯಾಪನೆ: ಯೆರೆಮೀಯ 12:1–6

ತಾನು ಕಷ್ಟದಲ್ಲಿ ಬಳಲುತ್ತಿರುವಾಗ ದುಷ್ಟರು ಹೇಗೆ ಏಳಿಗೆ ಹೊಂದುತ್ತಾರೆ ಎಂದು ಯೆರೆಮೀಯ ಪ್ರಶ್ನಿಸುತ್ತಾನೆ. ಕಷ್ಟಗಳನ್ನು ಸಹಿಸಿಕೊಳ್ಳುವುದು ಪ್ರವಾದಿಯ ಕರೆಯ ಭಾಗವಾಗಿದೆ ಮತ್ತು ಮುಂದೆಯೂ, ಹೆಚ್ಚಿನ ಪರೀಕ್ಷೆಗಳಿವೆ ಎಂದು ದೇವರ ಪ್ರತಿಕ್ರಿಯೆ ಅವನಿಗೆ ಕಲಿಸುತ್ತದೆ.

 

ಮೂರನೇ ವಿಖ್ಯಾಪನೆ: ಯೆರೆಮೀಯ 15:10–21

ಯೆರೆಮೀಯ ತನ್ನ ಪ್ರತ್ಯೇಕತೆ ಮತ್ತು ಬಳಲುವಿಕೆಯ ಬಗ್ಗೆ ಹತಾಶೆಗೊಳ್ಳುತ್ತಾನೆ. ದೇವರು ಅವರ ಪ್ರಸನ್ನತೆಯ ಬಗ್ಗೆ ಅವನಿಗೆ ಭರವಸೆ ನೀಡುತ್ತಾರೆ ಜೊತೆಗೆ, ಅವನನ್ನು ನಿಷ್ಠೆಯಿಂದಿರಲು ಕರೆಯುತ್ತಾರೆ.

 

ನಾಲ್ಕನೇ ವಿಖ್ಯಾಪನೆ: ಯೆರೆಮಿಯ 17:14–18

ಯೆರೆಮಿಯ ತನ್ನನ್ನು ಹಿಂಸಿಸುವವರಿಂದ ಬಿಡಿಸಲು ಕಳಕಳಿಯಿಂದ ವಿಜ್ಞಾಪಿಸುತ್ತಾನೆ. ವಿರೋಧಗಳ ನಡುವೆಯೂ ಯೆರೆಮೀಯ ರಕ್ಷಣೆ ಮತ್ತು ಬಲಕ್ಕಾಗಿ ದೇವರ ಮೇಲೆ ಅವಲಂಬಿತನಾಗಿದ್ದನ್ನು ಇಲ್ಲಿ ನಾವು ಕಾಣಬಹುದು.

 

ಐದನೇ ವಿಖ್ಯಾಪನೆ: ಯೆರೆಮಿಯ 18:18–23

ತನ್ನ ವಿರುದ್ಧ ಸಂಚು ರೂಪಿಸುವವರ ವಿರುದ್ಧ ನ್ಯಾಯಕ್ಕಾಗಿ ಯೆರೆಮಿಯ ಪ್ರಾರ್ಥಿಸುತ್ತಾನೆ. ಇದು ಕ್ಷಮೆ ಮತ್ತು ದೇವರ ಪ್ರತೀಕಾರದ ಬಯಕೆಯ ನಡುವಿನ ತಿಕ್ಕಾಟವನ್ನು ತೋರಿಸುತ್ತದೆ.

 

ಆರನೇ ವಿಖ್ಯಾಪನೆ: ಯೆರೆಮಿಯ 20:7-18

ಯೆರೆಮಿಯ ಬಹಳ ಹತಾಶೆಯನ್ನು ವ್ಯಕ್ತಪಡಿಸುತ್ತಾನೆ, ತನ್ನ ಜನ್ಮ ದಿನವನ್ನು ಸಹ ಶಪಿಸುತ್ತಾನೆ. ಈ ವಿಖ್ಯಾಪನೆ ಪ್ರವಾದಿಯ ಸೇವೆಯ ಭಾವನಾತ್ಮಕ ಹೊರೆಯನ್ನು ತಿಳಿಸುತ್ತದೆ, ಆದರ ಜೊತೆಗೆ, ಅವನ ಜೀವನದ ಮೇಲೆ ದೇವರ ಕರೆಯ ನಿರಂತರತೆಯನ್ನು ಸಹ ಅದು ಬಹಿರಂಗಪಡಿಸುತ್ತದೆ.

 

ಸಮಾಪ್ತಿ

ಗ್ರಂಥದಾದ್ಯಂತ ಯೆರೆಮಿಯನನ್ನು ಪ್ರಾರ್ಥನೆಯ ಪ್ರವಾದಿಯಾಗಿ ನಾವು ಕಾಣಬಹುದು. ಅವನ ವಿಖ್ಯಾಪನೆಗಳು ದುರ್ಬಲತೆ ಮತ್ತು ದೃಢ ನಂಬಿಕೆಯಿಂದ ಮಿಳಿತವಾದ ದೇವರೊಂದಿಗಿನ ಅವನ ನಿಕಟ ಸಂಬಂಧವನ್ನು ತೋರಿಸುತ್ತವೆ. ತೀವ್ರವಾದ ಕಿರುಕುಳ, ಒಂಟಿತನ ಮತ್ತು ಆಂತರಿಕ ಸಂಘರ್ಷದ ನಡುವೆ, ಯೆರೆಮಿಯನ ಪ್ರಾರ್ಥನೆಗಳು ಅವನ ಹೋರಾಟಗಳು, ದುಃಖಗಳು ಮತ್ತು ದೇವರಲ್ಲಿ ಅಚಲವಾದ ಅವನ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ಅವನು ತನ್ನ ಪ್ರವಾದಿಯ ಧ್ಯೇಯದೊಂದಿಗೆ ಹೋರಾಡುತ್ತಾನೆ, ದೈವಿಕ ನ್ಯಾಯವನ್ನು ಪ್ರಶ್ನಿಸುತ್ತಾನೆ ಮತ್ತು ಕರುಣೆಗಾಗಿ ಬೇಡಿಕೊಳ್ಳುತ್ತಾನೆ, ದೇವರೊಂದಿಗೆ ಹುಲುಮಾನವಂತೆ ಸಂವಹಿಸುತ್ತಾನೆ. ದೇವರೊಂದಿಗಿನ ತನ್ನ ಹೃತ್ಪೂರ್ವಕ ಸಂವಾದಗಳ ಮೂಲಕ, ಕಷ್ಟದ ಸಮಯದಲ್ಲಿ ಸಾಂತ್ವನ, ಮಾರ್ಗದರ್ಶನ ಮತ್ತು ಶಕ್ತಿಯನ್ನು ಹುಡುಕುವ ಸಾಧನವಾಗಿ ಪ್ರಾರ್ಥನೆಯ ನಿಜ ಅರ್ಥವನ್ನು ಯೆರೆಮೀಯ ನಮಗೆ ಕಲಿಸುತ್ತಾನೆ.

 

[ಇದು ಪ್ರೋ. ಕ್ಲೌಡೆ ಮರಿಯೋಟಿನಿ ಅವರ jeremiah-a-prophet-of-prayer ಎಂಬ ಪ್ರಬಂಧದ ಕನ್ನಡ ಭಾಷಾಂತರ. ಇದರ ಮೂಲ ಬರವಣಿಗೆಯನ್ನು https://claudemariottini.com/2025/04/02/jeremiah-a-prophet-of-prayer/ ಇದರಲ್ಲಿ ಕಾಣಬಹುದು.]

Comments

Popular posts from this blog

ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)

ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23